ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರುದ್ಧ ಪ್ರತಾಪ್ ಸಿಂಹ ಅವರ ಅರ್ಜಿ ವಜಾಗೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎಂದಿದ್ದಾರೆ.
ಬೆಂಗಳೂರು: ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪಿಐಎಲ್ನ್ನು ನ್ಯಾಯಾಲಯ ವಜಾಗೊಳಿಸಿದೆ. ತಮ್ಮ ಅರ್ಜಿ ವಜಾಗೊಳ್ಳುತ್ತಿದ್ದಂತೆ ಪ್ರತಾಪ್ ಸಿಂಹ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಎಫ್ಐಆರ್ ರದ್ದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹ ಹೇಳಿದ್ದೇನು?
ಸಾಹಿತಿ ಬಾನು ಮುಷ್ತಾಕ್ ಅವರ ಈ ಭಾಷಣವನ್ನು ಕೋರ್ಟ್ ನ ಮುಂದಿಟ್ಟಿದ್ದೆವು. ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎನ್ನುವುದಾದರೆ ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಬಹಳಷ್ಟು FIRಗಳನ್ನು ಕೂಡಲೇ ರದ್ದಾಗಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದಸರಾ ಉದ್ಘಾಟನಾ ವಿವಾದ: ಬಾನು ಬೆನ್ನಿಗೆ ನಿಂತ ರಾಜ್ಯದ ಲೇಖಕಿಯರು, ನಾಳೆ ಮಹತ್ವದ ಸುದ್ದಿಗೋಷ್ಠಿ
ಕೋರ್ಟ್ ತೀರ್ಪು
ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು:
- ಅರ್ಜಿದಾರರ ಯಾವುದೇ ಕಾನೂನಾತ್ಮಕ ಹಕ್ಕು ಉಲ್ಲಂಘನೆಯಾಗಿಲ್ಲ, ಆದ್ದರಿಂದ ಪಿಐಎಲ್ಗಳನ್ನು ಸ್ವೀಕರಿಸಲು ಅವಕಾಶವಿಲ್ಲ.
- “ವಿಜಯದಶಮಿ ಎಂದರೇನು? ಅದು ಕೆಟ್ಟದ ಮೇಲೆ ಒಳ್ಳೆಯದ ವಿಜಯ. ದೇಶಾದ್ಯಂತ ಈ ಹಬ್ಬವನ್ನು ಅದೇ ಉದ್ದೇಶದಿಂದ ಆಚರಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಹಕ್ಕು ಉಲ್ಲಂಘನೆ ಎಂಬ ಪ್ರಶ್ನೆಯೇ ಇಲ್ಲ” ಎಂದು ಸಿಜೆ ಅಭಿಪ್ರಾಯಪಟ್ಟರು.
- ಫಲವಾಗಿ, ಹೈಕೋರ್ಟ್ ವಿಭಾಗೀಯ ಪೀಠವು ಎಲ್ಲಾ ಪಿಐಎಲ್ಗಳನ್ನು ವಜಾಗೊಳಿಸಿ ಆದೇಶ ನೀಡಿತು.
ಇದನ್ನೂ ಓದಿ: 'ಕೈಮುಗಿಯುವೆ, ದಸರಾ ಉದ್ಘಾಟನೆ ಒಪ್ಪಬೇಡಿ: ಬಾನು ಮುಷ್ತಾಕ್ಗೆ ಅಜೀಂ ಮನವಿ
ಕೋಮುವಾದವನ್ನ ಹುಟ್ಟುಹಾಕೋದು ಬಿಟ್ಟು ಬೇರೇನೂ ಅಲ್ಲ
ದಸರಾ ಉದ್ಘಾಟನೆಗೆ ಭಾನುಮುಸ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಸಂಬಂಧಿಸಿದ ರಾಮನಗರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲರೂ ಭಾರತೀಯರು ಅಂತ ಒಪ್ಪಿಕೊಂಡ ಮೇಲೆ ಪದೇಪದೇ ಬೇರೆ ರೀತಿಯ ಚರ್ಚೆ ಬೇಡ. ಇದು ಕೋಮುವಾದವನ್ನ ಹುಟ್ಟುಹಾಕೋದು ಬಿಟ್ಟು ಬೇರೇನೂ ಅಲ್ಲ. ಬಿಜೆಪಿ ಸ್ನೇಹಿತರಿಗೆ ಅನೇಕ ಬಾರಿ ಹೇಳಿದ್ದೇನೆ, ದೇಶದಲ್ಲಿ ಭಾರತೀಯರು ಬದುಕಲಿಕ್ಕೆ ಬಿಡಿ. ಭಾರತವನ್ನ ವಿರೋಧಿಸುವವರ ಪರವಾಗಿ ನಾವ್ಯಾರು ಇಲ್ಲ. ಆದರೆ ನೀವು ಪದೇಪದೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬೇಡಿ. ಸರ್ವಧರ್ಮದ ವಿಚಾರ ಹಾಗೂ ಬಸವಣ್ಣನವರ ನಾಯಕತ್ವ, ಸಂವಿಧಾನಕ್ಕೆ ಅಗೌರವ ತೋರಬೇಡಿ. ರಾಜ್ಯಕ್ಕೆ ಧಕ್ಕೆ ಆಗುವ ರೀತಿ ನಡೆದುಕೊಳ್ಳಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ಟೌನ್ ಶಿಪ್ ವಿರೋಧಿಸಿ ರೈತರ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಎಲ್ಲಾ ವಿಚಾರ ತಿಳಿಸಿದ್ದಾರೆ. ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಹೊರತು ಬೇರೇನು ಅಲ್ಲ. ರೈತರ ಹಿತಕಾಯುಲು ಸರ್ಕಾರ, ಡಿಕೆಶಿ ಹಾಗೂ ಬಾಲಕೃಷ್ಣರವರು ಬದ್ಧರಾಗಿದ್ದೇವೆ.ಕೆಲವರು ರಾಜಕೀಯವನ್ನೇ ಮಾಡಬೇಕು ಅಂದಾಗ ಅವರಿಗೆ ಉತ್ತರ ಕೊಡಲು ಕಷ್ಟ ಎಂದು ಅಭಿಪ್ರಾಯಪಟ್ಟರು.


