ಬೆಂಗಳೂರಿನಲ್ಲಿ ಪುತ್ರನಿಂದಲೇ ಹತ್ಯೆಯಾದ ದಂಪತಿಯ ಮಗಳು ಅಮೆರಿಕಾದಿಂದ ಆಗಮಿಸಿದ್ದಾರೆ. ತಮ್ಮ ಪೋಷಕರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆರೋಪಿ ಸಹೋದರನಿಗೆ ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು (ಫೆ.14): ಪುತ್ರನಿಂದಲೇ ಹತ್ಯೆಯಾದ ತಂದೆ-ತಾಯಿಯ ಮರಣೋತ್ತರ ಪರೀಕ್ಷೆ ಪುತ್ರಿಯ ಸಮ್ಮುಖದಲ್ಲಿ ಶನಿವಾರ ನಡೆಯಲಿದೆ. ಮತ್ತೊಂದೆಡೆ ಪಾಲಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತನ್ನ ಸಹೋದರನಿಗೆ ಅವಕಾಶ ನೀಡುವಂತೆ ಕೋರಿ ಆರೋಪಿಯ ಸಹೋದರಿ ರಶ್ಮಿ ಚಂದ್ರ ಭಟ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

ಆರೋಪಿ ರೋಹನ್‌ ಚಂದ್ರ ಭಟ್‌ ಅವರ ತಂಗಿಯಾಗಿರುವ ರಶ್ಮಿ ಚಂದ್ರ ಭಟ್‌ ಅಮೆರಿಕಾದಿಂದ ಶುಕ್ರವಾರ ನಗರಕ್ಕೆ ಆಗಮಿಸಿದ್ದು, ಇದೀಗ ಇವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ನಮ್ಮ ಪಾಲಕರಾದ ನವೀನ್‌ ಚಂದ್ರ ಭಟ್‌(60), ಶ್ಯಾಮಲಾ ಭಟ್‌(55) ಅವರ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವಂತೆ ರಶ್ಮಿ ಕೋರ್ಟ್‌ಗೆ ಅರ್ಜಿ ಸಲ್ಲಿದ್ದಾರೆ. ನಮ್ಮ ತಂದೆ ತಾಯಿಗೆ ರೋಹನ್‌ ಏಕೈಕ ಪುತ್ರನಾಗಿದ್ದು, ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆರೋಪಿಯು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ಆದರೆ ಆತನ ಮೆಡಿಕಲ್‌ ಫಿಟ್‌ನೆಸ್‌ ಸರ್ಟಿಫಿಕೇಟ್‌ಗಾಗಿ ಕಾಯುತ್ತಿದ್ದೇವೆ. ಅದು ನಮ್ಮ ಕೈಸೇರಿದ ಕೂಡಲೇ ಆತನನ್ನು ನಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

YouTube video player