ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಾಗಲಕೋಟೆ ಜಿಲ್ಲೆಯ ಪ್ರಗತಿಪರ ರೈತ ಧನಪಾಲ ಯಲ್ಲಟ್ಟಿ ಅವರ ತೋಟಕ್ಕೆ ಭೇಟಿ ನೀಡಿ, ಅವರ ಬಹುಬೆಳೆ ವಿಧಾನವನ್ನು ವೀಕ್ಷಿಸಿದರು. ಹಳೆಯ ಪದ್ಧತಿಗಳನ್ನು ಕೈಬಿಟ್ಟು ಸಾವಯವ ಮತ್ತು ಆಧುನಿಕ ಕೃಷಿ ಅಳವಡಿಸಿಕೊಂಡು ಅವರ ಕಾರ್ಯವನ್ನು ವಿಜಯೇಂದ್ರ ಶ್ಲಾಘಿಸಿದರು.
ರಬಕವಿ-ಬನಹಟ್ಟಿ (ಫೆ.13): ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಪ್ರಗತಿಪರ ರೈತ, ಕನ್ನಡಪ್ರಭ ರೈತರತ್ನ ಪ್ರಶಸ್ತಿ ಪುರಸ್ಕೃತ ಧನಪಾಲ ಯಲ್ಲಟ್ಟಿ ಅವರ ತೋಟಕ್ಕೆ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಬಹುಬೆಳೆ ವಿಧಾನವನ್ನು ವೀಕ್ಷಿಸಿ ಧನಪಾಲ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ಹಳೆಯ ಪಾರಂಪರಿಕ ಪದ್ಧತಿ ಕೈಬಿಟ್ಟು ಸಾವಯವ ಮತ್ತು ಆಧುನಿಕ ತಂತ್ರಜ್ಞಾನಯುತ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಇದಕ್ಕೆ ಮಿಶ್ರ ಬೇಸಾಯ ವ್ಯವಸ್ಥೆ ಅಳವಡಿಸಿಕೊಂಡು ಲಾಭದಾಯಕ ಕೃಷಿ ಮಾಡುತ್ತಿರುವ ರೈತ ಧನಪಾಲ ಯಲ್ಲಟ್ಟಿ ಜ್ವಲಂತ ಉದಾಹರಣೆಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಕಳೆದ 3 ವರ್ಷದ ಹಿಂದೆ ‘ಕನ್ನಡಪ್ರಭ’ ವತಿಯಿಂದ ಕೊಡಮಾಡುವ ರೈತರತ್ನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿಗಳು, ಕೃಷಿಯಲ್ಲಿನ ಆವಿಷ್ಕಾರಕ್ಕೆ ಗೌರವ ಡಾಕ್ಟರೇಟ್ ಪಡೆದಿರುವ ಧನಪಾಲ ಯಲ್ಲಟ್ಟಿ ಅವರ ಸಾಧನೆ ರೈತರಿಗೆಲ್ಲ ಅನುಕರಣೀಯ ಎಂದರು.
ಮಿಶ್ರಬೆಳೆಯಲ್ಲಿನ ಬದನೆಕಾಯಿ ಪ್ರತಿದಿನ ಸ್ಥಳೀಯ ಮಾರುಕಟ್ಟೆಯಲ್ಲೇ ₹12 ರಿಂದ ₹15 ಸಾವಿರಕ್ಕೆ ಮಾರಾಟ ಆಗಲಿದ್ದು, ಚೆಂಡು ಹೂವಿನಿಂದ ನಿರಂತರ ಆದಾಯ ಬರಲಿದೆ ಎಂದು ವಿಜಯೇಂದ್ರಗೆ ರೈತ ಮಾಹಿತಿ ನೀಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಪ್ರಗತಿಪರ ರೈತ, ಕನ್ನಡಪ್ರಭ ರೈತರತ್ನ ಪ್ರಶಸ್ತಿ ಪುರಸ್ಕೃತ ಧನಪಾಲ ಯಲ್ಲಟ್ಟಿ ತೋಟಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಿಶ್ರ ಬೆಳೆಯ ಬದನೆ ಹಾಗೂ ಚೆಂಡು ಹೂವು ವೀಕ್ಷಿಸಿದದರು. ಈ ವೇಳೆ ಧನಪಾಲ ಯಲ್ಲಟ್ಟಿ ಅವರ ಪುತ್ರರು ಇದ್ದರು.



