ಕರ್ನಾಟಕ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ವಿಪಕ್ಷ ನಾಯಕ ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಪರೀಕ್ಷೆಯ ವೇಳೆ ಮೂವರು ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂಬ ಮಾಹಿತಿ ಬಂದಿದೆ. ನಮಗೂ ನಮ್ಮದೇ ಧಾರ್ಮಿಕ ನಂಬಿಕೆಗಳಿವೆ. ಅವನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಜನಿವಾರ ನಮ್ಮ ಧಾರ್ಮಿಕ ಗುರುತು ಎಂದು ಹೇಳಿದರು.

ಸಿಎಂ ವಿರುದ್ಧ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿ, ನಮಗೂ ದೇವರು ಇದೆ, ಅದನ್ನು ಬಿಟ್ಟು ಇರೋಕೆ ಆಗಲ್ಲ‌. ಸಿದ್ದರಾಮಯ್ಯಗೆ ನಾಮ,ಜನಿವಾರ, ಕಂಡ್ರೆ ಆಗಲ್ಲ. ಇಲ್ಲಿವರೆಗೂ ಎಫ್ ಐಆರ್ ದಾಖಲಾಗಿಲ್ಲ. ಈ ತಕ್ಷಣ ಅರೆಸ್ಟ್ ಮಾಡಿ, ಬೇರೆ ಧರ್ಮದವರಿಗೆ ತೆಗೆಯೋಕೆ ಹೇಳ್ತಿರಾ. ಹಿಂದೂಗಳನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡ್ತಿರಿ. ನಿಮಗೆ ನಾಚಿಕೆ ಇದ್ಯಾ ಸಿದ್ದರಾಯಯ್ಯ ಪಾಕಿಸ್ತಾನ ದಲ್ಲಿ ಇದಾರಾ? ನಿನ್ನೆ ಜನಿವಾರ ತೆಗೆಸಿದ ತಕ್ಷಣ ಪರೀಕ್ಷೆ ಬರೆಯೋ ಉತ್ಸವ ವೇ ಹೋಯ್ತು ಅಂತಿದ್ದಾರೆ, ವಿದ್ಯಾರ್ಥಿಗಳು. ಇನ್ನೂ ಚೆಕ್ ಮಾಡ್ತಿದ್ದೀವಿ ಅಂತಾನೇ ಇದಾರೆ. ಯಾವಾಗ ಎಫ್ ಐಅರ್ ಮಾಡ್ತಿರಿ. ಕಮೀಷನರ್ ಆಫೀಸ್ ಗೆ ಬಂದಮೇಲೆ ಈಗ ಎಫ್ ಐಆರ್ ಮಾಡ್ತಿವಿ ಅಂತಿದ್ದಾರೆ. 

ವಿದ್ಯಾರ್ಥಿಗಳ ಮನೋಭಾವದ ಮೇಲೂ ಇದರ ಪರಿಣಾಮ ಬೀರಿದೆ ಎಂದು ಹೇಳಿದ ಆಶೋಕ್, ಜನಿವಾರ ತೆಗೆಸಿದ ನಂತರ ಪರೀಕ್ಷೆ ಬರೆಯುವ ಮನೋಸ್ಥಿತಿ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇದು ಅವರ ಭವಿಷ್ಯಕ್ಕೆ ಹಾನಿ ಉಂಟುಮಾಡುವಂತಹ ಸಂಗತಿ. ಜನಿವಾರ ತೆಗೆಯಬೇಡಿ ಎಂದು ವಿದ್ಯಾರ್ಥಿಗಳು ಹೇಳಿದರೂ ಕೇಳದೇ ತೆಗೆಸಿರುವುದು ಅತ್ಯಂತ ಖಂಡನೀಯ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕ್ರಮವಾಗಿದೆ. ತಾಳಿ, ಕಾಲುಂಗುರ ಕೂಡ ಬಿಡಲ್ಲ. ಮೂಗುತಿಗೆ ಪ್ಲಾಸ್ಟರ್ ಹಾಕ್ತಾರೆ. ನಿಮಗೆ ನಾಚಿಕೆ ಆಗಲ್ವಾ.? ಎಂದರು.

ಪೊಲೀಸರ ಕಾರ್ಯವೈಖರಿಯ ಮೇಲೂ ಅಸಮಾಧಾನ

ಇಂದು ಜನಿವಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ನಾಳೆ ಲಿಂಗಾಯತ ಸಮುದಾಯದ ಶಿವದಾರ, ನಂತರ ಒಕ್ಕಲಿಗರ ಉಡುದಾರದ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳಬಹುದು. ಇದು ಅಪಾಯಕಾರಿ ಪ್ರವೃತ್ತಿ ಎಂದು ಎಚ್ಚರಿಸಿದರು.

ಪೊಲೀಸರ ಕಾರ್ಯವೈಖರಿಯ ಮೇಲೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಕಮಿಷನರ್ ಕಚೇರಿಗೆ ಬರುತ್ತೇನೆ ಎಂದು ತಿಳಿದ ಬಳಿಕವೇ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಘಟನೆಯ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.