ಪಾಕ್ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನಾ ದಾಳಿ ಬೆನ್ನಲ್ಲೇ ಕಾಂಗ್ರೆಸ್ಸಿನ 'ಶಾಂತಿ' ಟ್ವೀಟ್ಗೆ ಆಕ್ರೋಶ ವ್ಯಕ್ತವಾಗಿ, ಟ್ವೀಟ್ ಅಳಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಸಮಯ ಸರಿಯಿರಲಿಲ್ಲ ಎಂದರು. ಸೇನಾ ಕಾರ್ಯಾಚರಣೆಗೆ ಕಾಂಗ್ರೆಸ್ ಬೆಂಬಲವಿದೆ ಎಂದರು. ಬಿಜೆಪಿ ಟ್ವೀಟ್ ವಿಚಾರ ರಾಜಕೀಯಗೊಳಿಸಬಾರದು ಎಂದರು. ಪ್ರತಾಪ್ ಸಿಂಹ ಕಾಂಗ್ರೆಸ್ನ ಟ್ವೀಟ್ ಮತ್ತು ಸಿದ್ದರಾಮಯ್ಯ ನಿಲುವನ್ನು ಟೀಕಿಸಿದರು.
ಬೆಂಗಳೂರು (ಮೇ 07): ಭಾರತದ ಸೇನೆಯಿಂದ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಕರ್ನಾಟಕ ಕಾಂಗ್ರೆಸ್ನಿಂದ 'ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ - ಮಹಾತ್ಮ ಗಾಂಧಿ' ಎಂದು ಟ್ವೀಟ್ ಮಾಡಲಾಗುತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಡಿಲೀಟ್ ಮಾಡಲಾಗಿದೆ. 'ಗಾಂಧಿ ಅವರ ಸಂದೇಶ ಅದು. ಆದರೆ, ಪೋಸ್ಟ್ ಮಾಡಿರುವ ಟೈಮ್ ಸರಿಯಲ್ಲ' ಎಂದು ಈ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ದಾಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪಹಲ್ಗಾಮ್ ದಾಳಿಯ ನಂತರದಲ್ಲಿ ಸರಕಾರದ ಯಾವುದೇ ನಿಲುವಿಗೆ ನಮ್ಮ ಬೆಂಬಲ ಇದೆ ಎಂದಿದ್ದೆವು. ಭಾರತೀಯ ಸೇನೆ ಭಯೋತ್ಪಾದಕರ ನೆಲೆಯನ್ನು ಅಷ್ಟೇ ಟಾರ್ಗೆಟ್ ಮಾಡಿದೆ. ಪಾಕಿಸ್ತಾನ ಈ ದಾಳಿಗೆ ತಿರುಗೇಟು ಕೊಟ್ಟರೆ ನಾವು ಎದುರಿಸಲು ಸಿದ್ದ ಎಂದು ಭಾರತೀಯ ಸೇನೆ ಕೊಟ್ಟಿದೆ. ರಾಷ್ಟ್ರದ ಐಕ್ಯತೆ ಬಂದಾಗ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಭಾರತೀಯ ಸೇನೆಯ ಜೊತೆಗೆ ಇದ್ದೇವೆ ಎಂದರು.
ನಮ್ಮದು ಶಾಂತಿಯುತ ರಾಷ್ಟ್ರ. ಅಗತ್ಯ ಬಿದ್ದಾಗ ಯುದ್ಧ ಮಾಡಿದ್ದೆವು. ಇನ್ನು ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದು ಸರಿಯಲ್ಲ. ಎರಡು ಸಾರಿ ನಾವು ಪಾಕಿಸ್ತಾನದ ವಿರುದ್ಧ ಯುದ್ದ ಮಾಡಿದ್ದೆವು. ಚೀನಾದ ವಿರುದ್ಧ ಯುದ್ಧ ನಡೆದಾಗ ಬಿಜೆಪಿ ಹುಟ್ಟಿತ್ತಾ? ಇಷ್ಟು ದೊಡ್ಡ ಸೇನೆಯನ್ನು ಬೆಳೆಸಿದ್ದು, ಇದೀಗ ಉಗ್ರರ ವಿರುದ್ದ ದಾಳಿ ಮಾಡಿದೆ. ಇನ್ನು ಒಂದು ಟ್ವೀಟ್ ವಿಚಾರಕ್ಕೆ ಬಿಜೆಪಿ ಕೂಡಾ ರಾಜಕೀಯ ಮಾಡಬಾರದು ಎಂದು ಹೇಳಿದರು.
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಜೈಕಾರ ಹಾಕಿಕೊಂಡು ಎಲ್ಲಾ ಬಿಜೆಪಿ ಕಾರ್ಯಕರ್ತರು ಬೆಳೆದಿದ್ದಾರೆ. ಮೋದಿ ಅವರು ಬಾಯಿ ಮಾತಿಗೆ ಈ ಜಯ ಘೋಷ ಹಾಕಲಿಲ್ಲ ಇವತ್ತು ಆಪರೇಷನ್ ಸಿಂಧೂರ ಮಾಡಿ ಅದನ್ನು ನಿಜ ಮಾಡಿದ್ದಾರೆ. ನ್ಯೂಕ್ಲಿಯರ್ ಟೆಸ್ಟ್ ಮಾಡಿದ ವಾಜಪೇಯಿ ನಮ್ಮ ಹೆಮ್ಮೆ. ಈಗ ಮೋದಿ ಅವರು ಕೂಡ ಹೆಮ್ಮೆ. ಸಿಎಂ ಸಿದ್ದರಾಮಯ್ಯ ಮೊದಲು ಯುದ್ದ ಬೇಡ ಅಂದು ಪಾಕಿಸ್ತಾನಿಗಳಿಗೆ ಹೀರೋ ಆಗಿದ್ದರು. ಜನ ಥೂ ಛೀ ಅಂತಾ ಉಗಿದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದರು. ಇವತ್ತು ಕಾಂಗ್ರೆಸ್ ಶಾಂತಿಯ ಮಂತ್ರದ ಟ್ವೀಟ್ ಮಾಡಿತ್ತು. ಜನ ತಿರುಗಿ ಬಿದ್ದ ಮೇಲೆ ಟ್ವೀಟ್ ಡಿಲೀಟ್ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಜನಕ್ಕೆ ಹೆದರಿ ಇಂದು ಹಣೆಗೆ ಸಿಂಧೂರ ಇಟ್ಟು ಕೊಂಡಿದ್ದಾರೆ. ಸಿದ್ದರಾಮಯ್ಯ ಇಂದು ಸಿಂಧೂರರಾಮಯ್ಯ ಆಗಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ. ಶಾಂತಿ ಯಿಂದ ಮಾತ್ರ ಸ್ವಾತಂತ್ರ್ಯ ಬಂತಾ? ಗಾಂಧೀಜಿ ಯ ಶಾಂತಿ ಮಾತ್ರದಿಂದ ಮಾತ್ರ ಸ್ವಾತಂತ್ರ್ಯ ಬರಲಿಲ್ಲ. ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್ ರಂಥ ಕ್ರಾಂತಿ ಕಾರಿಗಳ ಕೊಡುಗೆ ಮುಖ್ಯ ಆಗಿತ್ತು. ಯುದ್ದ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡ್ತಿವಿ. ಶಾಂತಿ ಸ್ಥಾಪನೆಗಾಗಿಯೆ ಯುದ್ದ ಮಾಡ್ತಾ ಇರೋದು. ಪಾಕಿಸ್ತಾನ ಸೃಷ್ಟಿ ಆಗಲು ಕಾರಣ ಕಾಂಗ್ರೆಸ್. ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್. ಕಾಂಗ್ರೆಸ್ ಹುಟ್ಟಿಸಿದ ಶಿಶು ಪಾಕಿಸ್ತಾನ. ಹೀಗಾಗಿ ಪಾಕಿಸ್ತಾನದ ಮೇಲೆ ಯುದ್ದ ಅಂದರೆ ಕಾಂಗ್ರೆಸ್ ಗೆ ಹಿಂಸೆ ಅನ್ನಿಸುತ್ತೆ. ಕಾಂಗ್ರೆಸ್ ಮನಸ್ಥಿತಿ ಅರ್ಥ ಮಾಡಿಕೊಳ್ಳ ಬೇಕು. ಸಿದ್ದರಾಮಯ್ಯರ ಒಳಗಡೆಯೂ ನೋವು ಬಂದು ಶಾಂತಿಯ ಮಂತ್ರ ಪಠಿಸಿದ್ದರು.


