BSWMCL Scam: ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) 27 ಅಭಿಯಂತರರ ವರ್ಗಾವಣೆ ರದ್ದುಗೊಳಿಸಲು ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳು ತಲಾ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಎನ್ ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಏ.25): ನಿಯಮಾನುಸಾರ ವರ್ಗಾವಣೆ ಮಾಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) 27 ಅಭಿಯಂತರರನ್ನು (ಪರಿಸರ) ಕಾನೂನು ಬಾಹಿರವಾಗಿ ಸಂಸ್ಥೆಯಲ್ಲೇ ಉಳಿಸಿಕೊಳ್ಳಲು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರೀಗೌಡ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ.ರಾಜೇಶ್ ತಲಾ ₹20 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ
ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಈ ಇಬ್ಬರು ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ 27 ಮಂದಿಯ ಪೈಕಿ ಯಾರಾದರೂ ಒಬ್ಬರನ್ನು ಮತ್ತೆ ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಯಲ್ಲೇ ಉಳಿಸಿಕೊಂಡರೂ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಇಲಾಖೆ ಅಥವಾ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಬಿಎಸ್ಡಬ್ಲ್ಯುಎಂಎಲ್ನಲ್ಲಿ ಕಳೆದ ಆರೇಳು ವರ್ಷಗಳಿಗೂ ಹೆಚ್ಚು ಕಾಲದಿಂದ ಬೇರು ಬಿಟ್ಟಿದ್ದ ಅಭಿಯಂತರರುಗಳ ಪೈಕಿ 3 ಮಂದಿ ಕಾರ್ಯಪಾಲಕ ಅಭಿಯಂತರರು ಮತ್ತು 24 ಮಂದಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಯಲ್ಲಿದ್ದ ಪರಿಸರ ಅಭಿಯಂತರರನ್ನು ಸಾಮೂಹಿಕವಾಗಿ ಏ.13ರಂದು ರಾಜ್ಯ ಸರ್ಕಾರವು ಕಾನೂನು ಪ್ರಕಾರ ವರ್ಗಾವಣೆ ಮಾಡಿರುವುದ ಸರಿಯಿದೆ ಎಂದಿದ್ದಾರೆ.
ಆದರೆ, ಬಿಎಸ್ಡಬ್ಲ್ಯುಎಂಎಲ್ನ ಪರಮ ಭ್ರಷ್ಟ ಅಧಿಕಾರಿಗಳು ಎಂಬ ಕುಖ್ಯಾತಿಯನ್ನು ಪಡೆದಿರುವ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕರೀಗೌಡ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ.ರಾಜೇಶ್ ಅವರು ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆಗೊಂಡಿರುವ 3 ಮಂದಿ ಕಾರ್ಯಪಾಲಕ ಅಭಿಯಂತರರು ಮತ್ತು 24 ಮಂದಿ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಿಂದ ಜಿಬಿಎ ಮುಖ್ಯ ಆಯುಕ್ತರಿಗೆ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ತಲಾ 20 ಲಕ್ಷ ರು. ನೀಡಿದರೆ, ತಮ್ಮ ವರ್ಗಾವಣೆಯನ್ನು ರದ್ದುಗೊಳಿಸಿ ತಮ್ಮನ್ನು ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಯಲ್ಲೇ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿ, ಕಾನೂನು ಬಾಹಿರ ವಸೂಲಿ ಕಾರ್ಯಕ್ಕೆ ರಾಜಾರೋಷವಾಗಿ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೇಳು ವರ್ಷ ನಿಯಮ ಪಾಲಿಸಿಲ್ಲ
ಕಳೆದ ಆರೇಳು ವರ್ಷಗಳಿಂದ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಿಂದಿನ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಇಲಾಖೆ ಅಥವಾ ಈಗಿನ ಬಿಎಸ್ಡಬ್ಲ್ಯುಎಂಎಲ್ನ ಆಯಕಟ್ಟಿನ ಸ್ಥಳಗಳಲ್ಲಿಯೇ ಝಾಂಡಾ ಹೂಡಿದ್ದ 27 ಮಂದಿ ಪರಿಸರ ಅಭಿಯಂತರರುಗಳನ್ನು ತಡವಾಗಿಯಾದರೂ ರಾಜ್ಯ ಸರ್ಕಾರವು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿರುವ ಕಾರ್ಯ ಸಮಂಜಸವಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ರಾಜ್ಯ ಸರ್ಕಾರದ ಈ ಕಾನೂನು ಸಮ್ಮತವಾದ ಆದೇಶವನ್ನು ತಮ್ಮ ಸ್ವಾರ್ಥಕ್ಕೊಸ್ಕರ ಹಿಂಪಡೆದು, ತಾವು ಅಪೇಕ್ಷಿಸಿದಷ್ಟು ಪ್ರಮಾಣದ ಹಣ ನೀಡುವ ಅಭಿಯಂತರರನ್ನು ಪುನಃ ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಯಲ್ಲಿಯೇ ಉಳಿಸಿಕೊಳ್ಳುವ ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಿರುವ ಸಂಸ್ಥೆಯ ಸಿಇಒ ಕರೀಗೌಡ ಮತ್ತು ಸಿಜಿಎಂ ಎಸ್.ವಿ. ರಾಜೇಶ್ ಅವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವಂತೆ ರಮೇಶ್ ಆಗ್ರಹಿಸಿದ್ದಾರೆ.


