ಭಾರತೀಯ ರೈಲ್ವೆಯು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಕಾಯ್ದಿರಿಸಿದ ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಅಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ಪ್ರಮುಖ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.

ನವದೆಹಲಿ: ಭಾರತೀಯ ರೈಲ್ವೆ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್‌ನಲ್ಲಿ ಉಲ್ಲೇಖಿಸಿರುವ ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದಲ್ಲಿ, ಅವರ ಕಾಯ್ದಿರಿಸಿದ ಸೀಟ್ ಸ್ವಯಂಚಾಲಿತವಾಗಿ ರದ್ದುಗೊಳ್ಳಲಿದೆ.

ಈ ಹೊಸ ನಿಯಮದ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್ ಪರಿಶೀಲಕರಿಗೆ (ಟಿಟಿಇ) ಹೊಸ ಹ್ಯಾಂಡ್ ಹೆಲ್ಡ್ ಟರ್ಮಿನಲ್ (HHT) ಟ್ಯಾಬ್ಲೆಟ್‌ಗಳು ಒದಗಿಸಿದೆ. ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ, ಟಿಟಿಇ ತಕ್ಷಣವೇ ಆ ಮಾಹಿತಿಯನ್ನು ಈ ಸಾಧನದಲ್ಲಿ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದ ಮೇಲೆ, ಆ ಸೀಟ್ ಅನ್ನು ತಕ್ಷಣವೇ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಹಂಚಲಾಗುತ್ತದೆ.

ಮತ್ತೊಂದೆಡೆ, ಅವರ ಕಾಯ್ದಿರಿಸಿದ ಆಸನವನ್ನು ಮತ್ತೊಬ್ಬರಿಗೆ ನೀಡಲಾಗಿದೆ ಎಂಬ ಮಾಹಿತಿ ಮೂಲ ಪ್ರಯಾಣಿಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಈ ಹಿಂದೆ, ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೂ ಆ ಸೀಟ್ ಅನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡಲಾಗುತ್ತಿತ್ತು. ಹೊಸ ನಿಯಮದಿಂದಾಗಿ ಸೀಟ್ ವ್ಯರ್ಥವಾಗುವುದನ್ನು ತಡೆಯುವ ಜೊತೆಗೆ ಕಾಯುವಿಕೆ ಪಟ್ಟಿಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಂಡಹಳ್ಳಿಯಲ್ಲಿ ಪ್ರಮುಖ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ South Western Railway ಬೆಂಗಳೂರು ವಿಭಾಗವು, ಮಂಗಳವಾರದಿಂದ ನಾಲ್ಕು ಜೋಡಿ ಪ್ರಮುಖ ರೈಲುಗಳಿಗೆ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಿದೆ.

ಈ ವ್ಯವಸ್ಥೆಯಂತೆ, 

  • ಚಾಮುಂಡಿ ಎಕ್ಸ್‌ಪ್ರೆಸ್ (16215) ಮೈಸೂರು–ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸಿ ಬೆಳಿಗ್ಗೆ 8.45ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 8.46ಕ್ಕೆ ನಿರ್ಗಮಿಸಲಿದೆ.
  • ವಾಪಸ್ಸು ಹೋಗುವ ಕೆಎಸ್‌ಆರ್ ಬೆಂಗಳೂರು–ಮೈಸೂರು (16216) ರೈಲು ಸಂಜೆ 6.39ಕ್ಕೆ ಬಂದು 6.40ಕ್ಕೆ ತೆರಳಲಿದೆ.
  • ಬಸವ ಎಕ್ಸ್‌ಪ್ರೆಸ್ (17307) ಮೈಸೂರು–ಬಾಗಲಕೋಟೆ ರೈಲು ಮಧ್ಯಾಹ್ನ 3.16ಕ್ಕೆ ಆಗಮಿಸಿ 3.17ಕ್ಕೆ ಹೊರಡಲಿದೆ.
  • ವಾಪಸಾಗುವ ಬಾಗಲಕೋಟೆ–ಮೈಸೂರು (17308) ರೈಲು ಬೆಳಿಗ್ಗೆ 8.19ಕ್ಕೆ ಬಂದು 8.20ಕ್ಕೆ ನಿರ್ಗಮಿಸಲಿದೆ.
  • ತೂತುಕುಡಿ–ಮೈಸೂರು ಎಕ್ಸ್‌ಪ್ರೆಸ್ (16235) ಬೆಳಿಗ್ಗೆ 6.49ಕ್ಕೆ ಆಗಮಿಸಿ 6.50ಕ್ಕೆ ಹೊರಡಲಿದೆ.
  • ವಾಪಸಾಗುವ ಮೈಸೂರು–ತೂತುಕುಡಿ (16236) ರೈಲು ರಾತ್ರಿ 8.14ಕ್ಕೆ ಬಂದು 8.15ಕ್ಕೆ ತೆರಳಲಿದೆ.
  • ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ (16535) ಮೈಸೂರು–ಪಂಢರಪುರ ಮಾರ್ಗದಲ್ಲಿ ಸಂಜೆ 5.40ಕ್ಕೆ ಬಂದು 5.41ಕ್ಕೆ ನಿರ್ಗಮಿಸಲಿದೆ.
  • ವಾಪಸ್ಸು ಸಂಚರಿಸುವ ಪಂಢರಪುರ–ಮೈಸೂರು (16536) ರೈಲು ಬೆಳಿಗ್ಗೆ 7.44ಕ್ಕೆ ಆಗಮಿಸಿ 7.45ಕ್ಕೆ ಹೊರಡಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ

ನಾಯಂಡಹಳ್ಳಿ ಪ್ರದೇಶದ ನಿವಾಸಿಗಳಿಗೆ ಬೆಂಗಳೂರು ನಗರ ಹಾಗೂ ಮೈಸೂರು ಕಡೆಗೆ ಸಂಚರಿಸಲು ಈ ಹೊಸ ನಿಲುಗಡೆ ವ್ಯವಸ್ಥೆ ಬಹಳ ಸಹಕಾರಿಯಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಕ್ರಮದಿಂದ ಪ್ರಯಾಣಿಕರ ಸಮಯ ಉಳಿತಾಯವಾಗುವ ಜೊತೆಗೆ ಸಾರಿಗೆ ವ್ಯವಸ್ಥೆಯ ಪರಿಣಾಮಕಾರಿತ್ವವೂ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.