ಕಳೆದ 6 ತಿಂಗಳಿಂದ ರಾಜ್ಯ ಸರ್ಕಾರದಿಂದ ಕಮಿಷನ್‌ ಬಾರದ ಕಾರಣ, ಪಡಿತರ ವಿತರಕರ ಸಂಘವು ನವೆಂಬರ್‌ ತಿಂಗಳ ಪಡಿತರ ವಿತರಣೆಯನ್ನು ರಾಜ್ಯಾದ್ಯಂತ ಸ್ಥಗಿತಗೊಳಿಸಲು ನಿರ್ಧರಿಸಿದೆ. ಸರ್ಕಾರದ ಈ ನಡೆಯ ವಿರುದ್ಧ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದೆ.

- ಯಾದಗಿರಿ (ನ.9): ಕಳೆದ 6 ತಿಂಗಳಿಂದ ಪಡಿತರ ವಿತರಕರಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಕಮಿಷನ್‌ ಬರದಿದ್ದರಿಂದ ಸಗಟು ಮಳಿಗೆಗಳಿಂದ ನವೆಂಬರ್‌ ತಿಂಗಳ ಪಡಿತರ ಸ್ವೀಕರಿಸದೆ, ರಾಜ್ಯಾದ್ಯಂತ ಪಡಿತರ ವಿತರಿಸದಿರಲು ಪಡಿತರ ವಿತರಕರ ಸಂಘ ನಿರ್ಧರಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ:

ರಾಜ್ಯ ಸರ್ಕಾರದ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ‌ ನಿರ್ದೇಶಕ ಆರ್.ಮಹಾದೇವಪ್ಪ ಅವರು, ರಾಜ್ಯಾದ್ಯಂತ ಪಡಿತರ ವಿತರಕರಿಗೆ ಕಮಿಷನ್ ಬರದೆ ಇರುವುದರಿಂದ ತುಂಬಾ ತೊಂದರೆಯಾಗಿದ್ದು, ಈ ಸಮಸ್ಯೆ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಕೃಷ್ಟಪ್ಪ ಅವರು ಸಿಎಂ, ಡಿಸಿಎಂ, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನವೆಂಬರ್‌ ತಿಂಗಳ ಪಡಿತರ ವಿತರಣೆ ಮಾಡದಿರಲು ಸಂಘ ನಿರ್ಧರಿಸಿದೆ ಎಂದರು.

ಕೇಂದ್ರದ ಎನ್‌ಎಫ್‌ಎಸ್ 2 ತಿಂಗಳ ಕಮಿಷನ್ ಮಾತ್ರ ಬಂದಿದೆ

ಕೇಂದ್ರ‌ ಸರ್ಕಾರದ ಎನ್ಎಫ್ಎಸ್ ಅಕ್ಕಿಗೆ ಸಂಬಂಧಪಟ್ಟಂತೆ 2 ತಿಂಗಳ ಕಮಿಷನ್ ಬಂದಿದೆ. ಆದರೆ, ರಾಗಿ ಮತ್ತು ಜೋಳಕ್ಕೆ ಸಂಬಂಧಿಸಿದ ಕಮಿಷನ್‌ ಇನ್ನೂ ಬಂದಿಲ್ಲ. ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಅಳಲು ತೊಡಿಕೊಂಡರು.