
ಸಿದ್ಧರಾಮಯ್ಯ 'ಯುದ್ಧ ಬೇಡ' ಹೇಳಿಕೆ ಪಾಕಿಸ್ತಾನದಲ್ಲಿ ಟ್ರೆಂಡ್; ನಾನು ಹೇಳಿದ್ದು ಹಂಗಲ್ಲ ಎಂದ ಸಿಎಂ!
ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತದ ಯುದ್ಧದ ಸಿದ್ಧತೆಯ ನಡುವೆ, ಸಿಎಂ ಸಿದ್ದರಾಮಯ್ಯ ಅವರು ಯುದ್ಧವೊಂದೇ ಪರಿಹಾರವಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಪಾಕಿಸ್ತಾನದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿಯೇ ಯುದ್ಧ ವಿರೋಧಿ ಭಾವನೆ ಇದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು (ಏ.28): ಪಾಕ್ ಬೆಂಬಲಿಕ ಇಸ್ಲಾಮಿಕ್ ಉಗ್ರರು ಭಾರತದ ಕಾಶ್ಮೀರದೊಳಗೆ ನುಗ್ಗಿ 26 ಹಿಂದೂ ಪ್ರವಾಸಿಗರ ಮಾರಣಹೋಮ ಮಾಡಿದ್ದಾರೆ. ಇದೀಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು 'ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದೊಂದೇ ಪರಿಹಾರವಲ್ಲ' ಎಂದು ಹೇಳುವ ಮೂಲಕ ಯುದ್ಧೋನ್ಮಾದಕ್ಕೆ ತಣ್ಣೀರೆರಚಿದ್ದಾರೆ.
ಜಾಗತಿಕ ಮಟ್ಟದಲ್ಲಿ ದೊಡ್ಡ ಪಿಡುಗು ಆಗಿ ಕಾಡುತ್ತಿರುವ ಉಗ್ರರಿಗೆ ಬೆಂಬಲ ಕೊಟ್ಟಿರುವ ಪಾಕ್, ಭಾರತದ ಮೇಲಾಗಿರುವ ದಾಳಿಯನ್ನು ಈವರೆಗೂ ಖಂಡನೆ ಮಾಡಿಲ್ಲ. ಇದೀಗ ಪಾಕ್ ನೆಲದಲ್ಲಿ ಅಡಗಿರುವ ಉಗ್ರರ ವಿರುದ್ಧ ಭಾರತ ದಾಳಿ ಮಾಡುವ ಎಚ್ಚರಿಕೆ ನೀಡಿದೆ. ಇದರಿಂದ ಬೆಚ್ಚಿದ ಪಾಕಿಸ್ತಾನ ನಾವು ಕೂಡ ಭಾರತದ ಮೇಲೆ ಪರಮಾಣು ಬಾಂಬ್ ಹಾಕ್ತೇವೆ ಎಂದು ಪಾಕ್ ಸಚಿವರು, ಮಂತ್ರಿಗಳು ಹಾಗೂ ಸೇನಾಪಡೆ ಮುಖ್ಯಸ್ಥರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಜನರಿಗೆ ಊಟಕ್ಕೂ ಪರದಾಡುವ ಸ್ಥಿತಿ ಇದ್ದು, ಆರ್ಥಿಕ ಸ್ಥಿತಿ ಮಕಾಡೆ ಮಲಗಿದೆ. ಹೀಗಿದ್ದರೂ ಭಾರತವನ್ನು ಹೊಡೆದುರುಳಿಸುತ್ತೇವೆ ಎಂದು ಹೇಳುತ್ತಿರುವ ಪಾಕ್ ವಿರುದ್ಧ ಯುದ್ಧ ಬೇಡ ಎಂದು ಹೇಳಿರುವ ಸಿದ್ದರಾಮಯ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ಹೇಳಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲಿನ ಮಾಧ್ಯಮಗಳು ಭಾರತದಲ್ಲಿಯೇ ಪಾಕ್ ವಿರುದ್ಧ ಯುದ್ಧಕ್ಕೆ ವೊರೋಧವಿದೆ ಎಂದು ಸುದ್ದಿ ಪ್ರಸಾರ ಮಾಡುತ್ತಿವೆ. ಇದನ್ನು ನೋಡಿದ ವಿಪಕ್ಷ ನಾಯಕರು ಸಿದ್ದರಾಮಯ್ಯನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ನಮ್ಮ ದೇಶದ ಐಕ್ಯತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ನಾನು ಹೇಳಿರುವುದು ಹಾಗಲ್ಲ. ಪಾಕ್ ಮೇಲೆ ಯುದ್ಧ ಒಂದೇ ಪರಿಹಾರವಲ್ಲ. ಒಂದು ವೇಳೆ ಯುದ್ಧ ಅನಿವಾರ್ಯವಾದರೆ ಮಾಡಲಿ ಎಂದು ಹೇಳಿದ್ದಾರೆ.