ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಚೀನಾ ಮಧ್ಯಪ್ರವೇಶಿಸಬಾರದು ಎಂದು ಭಾರತ ಹೇಳಿದೆ. ಚೀನಾ ಇದನ್ನು ತನ್ನ ಆಂತರಿಕ ವಿಚಾರ ಎಂದು ಹೇಳುತ್ತಿದೆ. ಈ ವಿವಾದ ಉಭಯ ದೇಶಗಳ ಸಂಬಂಧವನ್ನು ಹದಗೆಡಿಸುತ್ತಿದೆ.

ನವದೆಹಲಿ: ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರ ಉತ್ತರಾಧಿಕಾರಿಯ ವಿಚಾರವು ಚೀನಾ-ಭಾರತ ಸಂಬಂಧಗಳಲ್ಲಿ ಇನ್ನೂ ಒಂದೊಂದು ಸಂಕಷ್ಟದ ಮುಳ್ಳಾಗಿದ್ದು, ಇದು ಇಬ್ಬರ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಅಡ್ಡಿಯಾಗುತ್ತಿದೆ ಎಂದು ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 2020ರ ಗಡಿ ಘರ್ಷಣೆಯ ನಂತರ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಲಿರುವ ಕೆಲವು ದಿನಗಳ ಮೊದಲೇ ಈ ಹೇಳಿಕೆ ಹೊರಬಂದಿದೆ.

ಈ ತಿಂಗಳಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಆಚರಣೆ ನಡೆಯಲಿದ್ದು, ಅದಕ್ಕೆ ಮುಂಚಿತವಾಗಿ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ಚೀನಾಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಲೈ ಲಾಮಾ ಅವರು ಮರಣದ ಬಳಿಕ ಮರುಜನ್ಮ ಪಡೆಯುತ್ತಾರೆ ಎಂದು ಟಿಬೆಟಿಯನ್ನರು ನಂಬುತ್ತಾರೆ. ಆದರೆ, ಚೀನಾ ಮಾತ್ರ ದಲೈ ಲಾಮಾ ಉತ್ತರಾಧಿಕಾರಿಯನ್ನು ತಮ್ಮ ಅಂಗೀಕಾರಕ್ಕೆ ಒಳಪಡಿಸಬೇಕು ಎಂಬ ಒತ್ತಾಯವನ್ನು ಮುಂದುವರೆಸುತ್ತಿದೆ.

ಚೀನಾದ ರಾಯಭಾರ ಕಚೇರಿಯ ವಕ್ತಾರೆ ಯು ಜಿಂಗ್, ಭಾರತದ ವಿರುದ್ಧ 5 ಪ್ರಮುಖ ಅಂಶಗಳನ್ನು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ. ಅವುಗಳೆಂದರೆ

  • ಮಾಜಿ ಅಧಿಕಾರಿಗಳು ಸೇರಿದಂತೆ ಭಾರತದ ಕೆಲವು ಕಾರ್ಯತಂತ್ರ ಮತ್ತು ಅಕಾಡೆಮಿಕ್ ವಲಯದವರು ದಲೈ ಲಾಮಾ ಅವರ ಪುನರ್ಜನ್ಮದ ಬಗ್ಗೆ, ಭಾರತ ಸರ್ಕಾರದ ಅಧಿಕೃತ ನಿಲುವಿಗೆ ವಿರುದ್ಧವಾಗಿ, ಅನಾವಶ್ಯಕ ಮತ್ತು ಅನುಚಿತ ಹೇಳಿಕೆಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ.
  • ವಿದೇಶಾಂಗ ವ್ಯವಹಾರಗಳ ವೃತ್ತಿಪರರಾಗಿ, ಅವರಿಗೆ ಕ್ಸಿಜಾಂಗ್ (ಟಿಬೆಟ್) ಸಂಬಂಧಿತ ವಿಷಯಗಳ ಸೂಕ್ಷ್ಮತೆಯನ್ನು ಸಂಪೂರ್ಣವಾಗಿ ಅರಿಯುವ ಜವಾಬ್ದಾರಿ ಇದೆ. ದಲೈ ಲಾಮಾ ಅವರ ಪುನರ್ಜನ್ಮ ಮತ್ತು ಉತ್ತರಾಧಿಕಾರಿ ವಿಚಾರವು ಸಂಪೂರ್ಣವಾಗಿ ಚೀನಾದ ಆಂತರಿಕ ವ್ಯವಹಾರವಾಗಿದೆ ಮತ್ತು ಯಾವುದೇ ಬಾಹ್ಯ ಹಸ್ತಕ್ಷೇಪವನ್ನು ಚೀನಾ ಸಹಿಸುವುದಿಲ್ಲ.
  • ಭಾರತ ಸರ್ಕಾರವು ಈಗಾಗಲೇ ಚೀನಾಕ್ಕೆ ರಾಜಕೀಯ ಬದ್ಧತೆ ಸೂಚಿಸಿದೆ. ಕ್ಸಿಜಾಂಗ್ ಸ್ವಾಯತ್ತ ಪ್ರದೇಶವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವೆಂದು ಭಾರತ ಒಪ್ಪಿಕೊಂಡಿದ್ದು, ಟಿಬೆಟಿಯನ್ ಜನರು ಭಾರತದಲ್ಲಿ ಚೀನಾ ವಿರುದ್ಧ ರಾಜಕೀಯ ಚಟುವಟಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ನಿಲುವು ಕೂಡ ಆಧಾರಿತವಾಗಿದೆ.
  • ಚೀನಾ ಸರ್ಕಾರವು ತನ್ನ ರಾಷ್ಟ್ರದೊಳಗಿನ ವಿವಿಧ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಸಾಂಸ್ಕೃತಿಕ ಸಂರಕ್ಷಣೆಗೆ ಮತ್ತು ಅವರ ಅಭಿವೃದ್ಧಿಗೆ ಅತ್ಯಂತ ಮಹತ್ವ ನೀಡುತ್ತಿದೆ. ಕ್ಸಿಜಾಂಗ್‌ನಲ್ಲಿ ಟಿಬೆಟಿಯನ್ ಜನರು ತಮ್ಮ ಸಾಂಪ್ರದಾಯಿಕ ಉಡುಗೆ, ಆಹಾರದ ರುಚಿ, ವಾಸ್ತುಶಿಲ್ಪ ಶೈಲಿ ಮತ್ತು ಇತರ ಪರಂಪರೆ ಸಂಸ್ಕೃತಿಗಳನ್ನು ಸ್ವತಂತ್ರವಾಗಿ ಪಾಲಿಸುತ್ತಿದ್ದಾರೆ.
  • ವಾಸ್ತವವಾಗಿ, ಕ್ಸಿಜಾಂಗ್ ಸಂಬಂಧಿತ ವಿಷಯವು ಚೀನಾ-ಭಾರತ ಸಂಬಂಧಗಳಲ್ಲಿ ಒಂದು ಮುಳ್ಳಾಗಿದ್ದು, ಭಾರತಕ್ಕೂ ಹೊರೆಯಾಗುತ್ತಿದೆ. ‘ಕ್ಸಿಜಾಂಗ್ ಕಾರ್ಡ್’ ಆಡುವುದು ಭಾರತವು ತನ್ನ ಕಾಲಿಗೆ ತಾನು ಗುಂಡು ಹೊಡೆಯುವಂತಾಗುತ್ತದೆ ಎಂಬುದು ಸ್ಪಷ್ಟವಾಗಿದೆ.

ದಲೈ ಲಾಮಾ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ, ಅವರ ಪಕ್ಕದಲ್ಲಿ ಕುಳಿತಿದ್ದ ಸಂಸದೀಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ದಲೈ ಲಾಮಾ ಬೌದ್ಧರಿಗೂ, ಟಿಬೆಟ್ ಜನತೆಯಿಗೂ ಅತ್ಯಂತ ಪ್ರಮುಖ ಆಧ್ಯಾತ್ಮಿಕ ನಾಯಕ. ಅವರ ಪುನರ್ಜನ್ಮದ ಬಗ್ಗೆ ನಿರ್ಣಯವು ಅವರೇ ತೆಗೆದುಕೊಳ್ಳಬೇಕು, ಹಾಗೂ ಅದು ಸಂಪ್ರದಾಯದ ಅನುಸಾರ ನಡೆಯಬೇಕು. ಬೇರೆ ಯಾರಿಗೂ ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ,” ಎಂದು ಹೇಳಿದರು.

ಜುಲೈ 4ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನವದೆಹಲಿ ಯಾವುದೇ ಧಾರ್ಮಿಕ ನಂಬಿಕೆಗಳ ಅಥವಾ ಆಚರಣೆಗಳ ಕುರಿತು ತನ್ನದೇ ಆದ ನಿಲುವು ಹೊಂದುವುದಿಲ್ಲ ಅಥವಾ ಮಾತಾಡುವುದಿಲ್ಲ ಎಂದು ಹೇಳಿಕೆ ನೀಡಿತು. ಜುಲೈ 15ರಂದು ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಎಸ್. ಜೈಶಂಕರ್ ಟಿಯಾಂಜಿನ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಅವರು ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯಿಂದ ಬಿಕ್ಕಟ್ಟಾದ ಸಂಬಂಧವನ್ನು ಮರುಸ್ಥಾಪಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ದೇಶಗಳು ಈಗ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿಯೇ ಈ ಭೇಟಿ ನಡೆಯುತ್ತಿದೆ.

Scroll to load tweet…