ಮದುವೆ ಸಮಾರಂಭವನ್ನು ಅದ್ಭುತವಾಗಿ ಸೆರೆ ಹಿಡಿಯಲು ಡ್ರೋನ್ ಬಳಕೆ ಮಾಡಲು ಸಾಧ್ಯವಿಲ್ಲ. ಇನ್ನು ಪಟಾಕಿ ಕೂಡ ಸಿಡಿಸುವಂತಿಲ್ಲ. ಯಾವುದೇ ಕಾರ್ಯಕ್ರಮವಾದರೂ ಡ್ರೋನ್, ಪಟಾಕಿ ಬಳಕೆ ನಿಷೇಧಿಸಲಾಗಿದೆ.
ಅಹಮ್ಮಾದಾಬಾದ್(ಮೇ.09) ಭಾರತ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿದೆ. ಪಾಕಿಸ್ತಾನ ಸತತ ಡ್ರೋನ್, ಕ್ಷಿಪಣಿ ದಾಳಿ ನಡೆಸುತ್ತಿದೆ. ಭಾರತ ಈ ದಾಳಿ ಹಿಮ್ಮೆಟ್ಟಿಸುತ್ತಿದೆ. ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನವಾಗುತ್ತಿದೆ. ಕೇವಲ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ, ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ಗುಜರಾತ್, ರಾಜಸ್ಥಾನ, ಪಂಜಾಬ್ ರಾಜ್ಯದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಪಾಕಿಸ್ತಾನ ಸತತ ದಾಳಿ ನಡೆಸುತ್ತಿದೆ. ಗಡಿಯಲ್ಲಿ ಯುದ್ಧ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಮದುವೆಯಲ್ಲಿ ಡ್ರೋನ್, ಕಾರ್ಯಕ್ರಮಗಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ. ಈ ಆದೇಶವನ್ನು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ನೀಡಿದ್ದಾರೆ.
ಮೇ.15ರ ವರೆಗೆ ಡ್ರೋನ್,ಪಟಾಕಿ ನಿಷೇಧ
ಜಮ್ಮು ಮತ್ತು ಕಾಶ್ಮೀರ ಜೊತೆಗೆ ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಾಗೂ ವಿನಾ ಕಾರಣ ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಲು ಗುಜರಾತ್ ಸರ್ಕಾರ ಡ್ರೋನ್ ಬಳಕೆ, ಪಟಾಕಿ ಬಳಕೆ ನಿಷೇಧಿಸಿದೆ. ಸದ್ಯ ಮೇ. 15ರ ವರೆಗೆ ಡ್ರೋನ್ ಹಾಗೂ ಪಟಾಕಿ ಬಳಕೆ ನಿಷೇಧಿಸಲಾಗಿದೆ.
ಅಣ್ಣಾ ತುಂಬಾ ಲಾಸ್ ಆಗಿದೆ ಸಾಲ ಕೊಡಿ, ಪಾಕ್ ಮನವಿ ವೈರಲ್ ಬೆನ್ನಲ್ಲೇ ಹ್ಯಾಕ್ ಸಮರ್ಥನೆ
ಮದುವೆ ಸೀಸನ್ನಲ್ಲೇ ಡ್ರೋನ್ ಬ್ಯಾನ್
ಸದ್ಯ ಮದುವೆ ಸೀಸನ್ ಆಗಿದೆ. ಹೀಗಾಗಿ ಮದುವೆ ಸಮಾರಂಭವನ್ನು ಮತ್ತಷ್ಟು ಸ್ಮರಣೀಯಾಗಿಸಲು ಪ್ರಯತ್ನಿಸುತ್ತಾರೆ. ಈ ಪೈಕಿ ಪ್ರೀ ವೆಡ್ಡಿಂಗ್,ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಹೀಗೆ ಹಲವು ಮದುವೆ ಕಾರ್ಯಕ್ರಮಗಳ ಫೋಟೋ, ವಿಡಿಯೋ ಮಾಡಲಾಗುತ್ತದೆ. ಬಹುತೇಕರು ಡ್ರೋನ್ ಬಳಸಿ ವಿಡಿಯೋ ಶೂಟ್ ಮಾಡುತ್ತಾರೆ. ಆದರೆ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಜೊತೆಗೆ, ಪಾಕಿಸ್ತಾನ ಡ್ರೋನ್ ಮೂಲಕ ದಾಳಿ ಮಾಡುತ್ತಿರುವ ಕಾರಣ ಮದುವೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಕೆಯಿಂದ ಭದ್ರತಾ ಸಮಸ್ಯೆ ಸೃಷ್ಟಿಯಾಗಲಿದೆ. ಎಲ್ಲೆಡೆ ರೇಡಾರ್ ಹದ್ದಿನ ಕಣ್ಣಟ್ಟಿದೆ. ಹೀಗಾಗಿ ಡ್ರೋನ್ ಹೆಚ್ಚಿನ ಆತಂಕ ಜೊತೆಗೆ ಸುರಕ್ಷತೆ ನೀಡಲು ಸವಾಲಾಗಲಿದೆ. ಹೀಗಾಗಿ ಮದುವೆ ಸೇರದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ.
ಸಂಘರ್ಷದಿಂದ ಪಟಾಕಿಯಿಂದ ಅನಗತ್ಯ ಆತಂಕ
ಪಾಕಿಸ್ತಾನದ ಸತತ ದಾಳಿ ನಡೆಯುತ್ತಿದೆ. ಹೀಗಾಗಿ ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಬಾಂಬ್, ಮಿಸೈಲ್, ಗುಂಡಿನ ಶಬ್ದಗಳು ಕೇಳಿಸುತ್ತಲೇ ಇದೆ. ಇದಕ್ಕೆ ತಕ್ಕಂತೆ ಸೈರನ್ ಮೂಲಕ ಜನರನ್ನು ಎಚ್ಚರಿಸಲಾಗುತ್ತದೆ. ಇದರ ನಡುವೆ ಪಟಾಕಿ ಶಬ್ದಗಳು ಜನರ ಆತಂಕ ಹೆಚ್ಚಿಸುತ್ತದೆ. ಇಷ್ಟೇ ಅಲ್ಲ ಗೊಂದಲ ಸೃಷ್ಟಿಸುತ್ತದೆ. ಹೀಗಾಗಿ ಪಟಾಕಿ ಬ್ಯಾನ್ ಮಾಡಲಾಗಿದೆ.
ಗುಜರಾತ್ ಗಡಿ ಪ್ರದೇಶದಲ್ಲಿ ಹೈ ಅಲರ್ಟ್
ಗುಜರಾತ್ ಗಡಿ ಪ್ರದೇಶಗಳಲ್ಲಿ ಭಾರಿ ಅಲರ್ಟ್ ನೀಡಲಾಗಿದೆ. ಪಾಕಿಸ್ತಾನ ಎಲ್ಲಾ ದಿಕ್ಕುಗಳಿಂದ ದಾಳಿಗೆ ಪ್ರಯತ್ನಿಸುತ್ತಿದೆ. ಗುಜರಾತ್ ಭೂ ಪ್ರದೇಶ ಹಾಗೂ ಜಲ ಪ್ರದೇಶಗಳನ್ನು ಪಾಕಿಸ್ತಾನ ಜೊತೆ ಹಂಚಿಕೊಂಡಿದೆ. ಕರಾಚಿ ಬಂದರು ಗುಜರಾತ್ ಸಮೀಪದಲ್ಲೇ ಇದೆ. ಪಾಕಿಸ್ತಾನ ತನ್ನ ಎಲ್ಲಾ ಶಕ್ತಿ ಬಳಸಿ ಭಾರತದ ಮೇಲೆ ದಾಳಿಗೆ ಮುಂದಾಗುತ್ತಿದೆ. ಆದರೆ ಭಾರತ ಈ ಎಲ್ಲಾ ದಾಳಿಗಳನ್ನು ಹೊಡೆದುರುಳಿಸಿದೆ.
ಪಾಕ್ ಸಂಸತ್ತಿನಲ್ಲಿ ಟಿಪ್ಪು ಸುಲ್ತಾನ್ ಮಾತು, ನಮ್ಮ ಪ್ರಧಾನಿ 'ಪುಕ್ಕಲ' ಎಂದ ಪಾಕ್ ಸಂಸದ!


