ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ, ಹುಡುಕಾಟಿ ಸುಸ್ತಾಗಿದ್ದ ಕುಟುಂಬ ಕೊನೆಗೆ ನೋವಿನಲ್ಲಿ ದೇವರಲ್ಲಿ ಬೇಡಿಕೊಂಡಿತ್ತು. ಮರು ದಿನವೇ ಚಿನ್ನ ಪ್ರತ್ಯಕ್ಷವಾದ ಘಟನೆ ನಡೆದಿದೆ.

ಕಾಸರಗೋಡು (ಏ.23) ಹಬ್ಬದ ಪ್ರಯುಕ್ತು ಕುಟುಂಬಸ್ಥರ ಮನೆಗೆ ದಂಪತಿಗಳು ಆಗಮಿಸಿದ್ದರು. ಹಬ್ಬದ ಸಂಭ್ರಮದಲ್ಲಿ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತಾಳಿ ಕಳೆದು ಹೋಗಿತ್ತು. ಕುಟುಂಬಸ್ಥರು, ಅಕ್ಕ ಪಕ್ಕದ ಮನೆಯವರು ಎಲ್ಲರೂ ಸೇರಿ ಹುಡುಕಿದರೂ ಪತ್ತೆಯಾಗಲಿಲ್ಲ. ಬೇರೆ ದಾರಿ ಕಾಣದೆ ದೇವರ ಮೋರೆ ಹೋದ ದಂಪತಿಗಳು ತಾಳಿ ಮರಳಿಸುವಂತೆ ಬೇಡಿಕೊಂಡಿದ್ದರು. ಬಳಿಕ ಸಪ್ಪೆ ಮೋರೆಯೊಂದಿಗೆ ಮನೆಗೆ ಮರಳಿದ್ದಾರೆ. ದೇವರ ಮೋರೆ ಹೋದ ದಂಪತಿಗೆ ಮರು ದಿನವೆ ಶುಭ ಸುದ್ಧಿ ಸಿಕ್ಕಿದೆ. ಕಳೆದ ಹೋದ ತಾಳಿ ಚಪ್ಪಲಿಯಲ್ಲಿ ಪತ್ತೆಯಾಗುವ ಮೂಲಕ ಪವಾಡವೊಂದು ನಡೆದಿದೆ. ಈ ಘಟನೆ ಕರ್ನಾಟಕದ ಗಡಿ ಭಾಗ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡಿನ ಪಳ್ಳಿಕರದ ಚೆರ್ಕಾಪ್ಪಾರ ಬಳಿ ನಿವಾಸಿ ಕನಕ ಅವರ ಮನೆಗೆ ಸಂಬಂಧಿಕರು ಆಗಮಿಸಿದ್ದರು. ಈ ಪೈಕಿ ಜಿಷಾ ಅವರ ಕೊರಳಲ್ಲಿದ್ದ ಚಿನ್ನದ ತಾಳಿ ನಾಪತ್ತೆಯಾಗಿದೆ. ವಿಷು ಹಬ್ಬಕ್ಕೂ ಮುನ್ನ ಜಿಷಾ ಆಗಮಿಸಿದ್ದರು. ಹಬ್ಬದ ಸಂಭ್ರಮ, ತಯಾರಿಯಲ್ಲಿ ತಾಳಿ ಕಳೆದುಹೋಗಿದೆ. ಕನಕಾ ಇಡೀ ಕುಟುಂಬ, ಜಿಷಾ, ಸಂಬಂಧಿಕರು ಸೇರಿದಂತೆ ಅಕ್ಕ ಪಕ್ಕದ ಮನೆಯವರೂ ತಾಳಿಗಾಗಿ ಹುಡುಕಾಟ ನಡೆಸಿದ್ದರು. ಬಸ್ಟ್ ಸ್ಟಾಂಡ್‌ನಿಂದ ಹಿಡಿದು ಮನಯವರೆಗೆ ಹುಡುಕಾಡಿದರೂ ತಾಳಿಯ ಸುಳಿವು ಪತ್ತೆಯಾಗಲಿಲ್ಲ. ನೆರಮನೆಯ ಸುಧಾ ಅನ್ನೋ ಮಹಿಳೆ ಕೂಡ ಚಿನ್ನ ಹುಡುಕಾಟ ನಡೆಸಲು ಸಂಬಂಧಿಕರ ಜೊತೆ ತೆರಳಿದ್ದರು. ಆದರೆ ಪತ್ತೆಯಾಗಿರಲಿಲ್ಲ.

ದೇವರಲ್ಲಿ ಪ್ರಾರ್ಥಿಸಿದ ಜಿಷಾ

ಗಂಡ ಕಟ್ಟಿದ ತಾಳಿ ಕಳೆದುಹೋಗಿದೆ. ಇತ್ತ ಚಿನ್ನದ ಬೆಲೆ ಅತ್ಯಂತ ದುಬಾರಿ ಸರಿಸುಮಾರು 1.5 ಲಕ್ಷ ರೂಪಾಯಿಗೂ ಅಧಿಕಗ ಮೌಲ್ಯದ ತಾಳಿ ಖರೀದಿ ಅಸಾಧ್ಯ. ಇತ್ತ ತಾಳಿ ಕಳೆದು ಹೋಗುವುದು ಉತ್ತಮ ಸಂಕೇತವಲ್ಲ ಎಂದೆಲ್ಲಾ ಆಲೋಚಿಸಿದ ಜಿಷಾ ಕೊನೆಗ ದೇವರಲ್ಲಿ ಬೇಡಿಕೊಂಡಿದ್ದಾರೆ. ದಯಮಾಡಿ ಕಳೆದು ಹೋದ ತಾಳಿ ಮರಳಿಸಿ ಎಂದು ಪ್ರಾರ್ಥಿಸಿದ್ದಾರೆ.

ಚಪ್ಪಲಿಯಲ್ಲಿ ತಾಳಿ ಪತ್ತೆ

ಹುಡುಕಾಟ ಮುಗಿದಿತ್ತು. ಬೆಳಗ್ಗೆ ಪೌರ ಕಾರ್ಮಕರು ಕಸ ತೆಗೆಯಲು ಆಗಮಿಸಿದ್ರು. ಈ ವೇಳೆ ಹಸಿ ಕಸ, ಒಣ ಕಸಗಳನ್ನು ಸಂಗ್ರಹಿಸಿದ್ದಾರೆ. ಚಿನ್ನ ಹುಡುಕಾಟದ ನಡುವೆ ನೆರಮನೆಯ ಸುಧಾ ಅವರ ಚಪ್ಪಲಿ ಹರಿದಿತ್ತು. ಹೀಗಾಗಿ ಪೌರ ಕಾರ್ಮಿಕರು ಆಗಮಿಸಿದಾಗ ಸುಧಾ ಅವರು ತಮ್ಮ ಹರಿದ ಚಪ್ಪಲಿಗಳನ್ನು ನೀಡಿದ್ದಾರೆ. ಚಪ್ಪಲಿ, ಕಸ ಸಂಗ್ರಹಿಸಿದ ಪೌರ ಕಾರ್ಮಿಕರು ಮರಳಿದ್ದಾರೆ.

ಪೌರಕಾರ್ಮಿಕರು ಕಸ ವಿಲೇವಾರಿ ಮಾಡುವಾಗ ಸುಧಾ ಮನೆಯಿಂದ ತಂದ ಚಪ್ಪಲಿಗಳಲ್ಲಿ ಒಂದು ಕೆಳಗೆ ಬಿತ್ತು. ಆಗ ಅದರ ಕೆಳಗೆ ಅಂಟಿಕೊಂಡಿದ್ದ ಮಣ್ಣು, ಕೊಳೆ ಮತ್ತು ಬಬಲ್ ಗಮ್ ಕಾಣಿಸಿತು. ಸುಜಾ ಅವರು ಆ ಬಬಲ್ ಗಮ್ ಅನ್ನು ತೆಗೆಯಲು ಯತ್ನಿಸಿದಾಗ, ಏನೋ ಹೊಳೆಯುವುದು ಕಣ್ಣಿಗೆ ಬಿತ್ತು. ಕುತೂಹಲದಿಂದ ಬಬಲ್ ಗಮ್ ಅನ್ನು ಕೆರೆದು ತೆಗೆದಾಗ, ಒಂದು ಪವನ್ ತೂಕದ ತಾಳಿ ಪಳಪಳ ಹೊಳೆಯುತ್ತಿತ್ತು. ಅದು ಚಿನ್ನವೇ ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಉಜ್ಜಿ ನೋಡಿದರು. ನಂತರ ಚಪ್ಪಲಿಯ ಮಾಲೀಕರಾದ ಸುಧಾ ಅವರ ಬಳಿ ವಿಚಾರಿಸಿದಾಗ, ಜಿಷಾ ಅವರ ತಾಳಿ ಕಳೆದುಹೋದ ಕಥೆಯನ್ನು ವಿವರಿಸಿದರು. ಆಗಲೇ ಆ ತಾಳಿ ಯಾರದ್ದು ಎಂದು ಗೊತ್ತಾಗಿದ್ದು ಎಂದು ಸುಜಾ ಹೇಳಿದ್ದಾರೆ.

ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಮೆಚ್ಚುಗೆ

ಹೀಗೆ, ಚಪ್ಪಲಿಗೆ ಅಂಟಿದ್ದ ಬಬಲ್ ಗಮ್‌ನಲ್ಲಿ ಸಿಕ್ಕ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ತಾಳಿಯನ್ನು ಅದರ ಮಾಲೀಕರಾದ ಜಿಷಾ ಅವರಿಗೆ ಹಿಂದಿರುಗಿಸಲಾಯಿತು. ಜಿಷಾ ಅವರು ಸಂತೋಷದಿಂದ ತಾಳಿಯನ್ನು ಪಡೆದು ಮತ್ತೆ ತಮ್ಮ ಸರಕ್ಕೆ ಹಾಕಿಕೊಂಡರು. ಈ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯರು ಪೌರಕಾರ್ಮಿಕರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ.