ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೀತಿದೆ, ಮುಗಿಯಲಿ. ಈಗ ನಾವು ಉತ್ತರ ಕೊಡಲು ಬರೋದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರು (ಸೆ.08): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೀತಿದೆ, ಮುಗಿಯಲಿ. ಈಗ ನಾವು ಉತ್ತರ ಕೊಡಲು ಬರೋದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಂತರ ಮಾತನಾಡಿದ ಅವರು, ತನಿಖೆ ಮುಗಿದ ಮೇಲೆ ನೋಡೋಣ. ಯಾರ್ಯಾರ ಪಾತ್ರ ಇದೆ ಅದೆಲ್ಲವೂ ತನಿಖೆ ಆಗ್ತಿದೆ. ಎಲ್ಲವೂ ತನಿಖೆಯಲ್ಲಿ ಅಂತಿಮವಾಗಿ ಹೊರಗೆ ಬರುತ್ತೆ. ಸೋನಿಯಾ ಗಾಂಧಿ ಅವರಿಗೆ ಕೆಲವರು ಪತ್ರ ಬರೆದಿರೋದು ಗೊತ್ತಿಲ್ಲ. ಎಸ್ಐಟಿ ತನಿಖೆ ನಡೆಯುವಾಗ ನಾನಾಗಲೀ ಸಿಎಂ ಸಿದ್ದರಾಮಯ್ಯ ಆಗಲೀ ಯಾರೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ತಿಳಿಸಿದರು.

ಗಣೇಶೋತ್ಸವ ವೇಳೆ ಮದ್ದೂರು ಸೇರಿ ಕೆಲವು ಕಡೆ ಕಲ್ಲು ತೂರಾಟ ಇತರೆ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ. ಕೆಲವು ಕಡೆ ಸಣ್ಣಪುಟ್ಟ ಘಟನೆ ಆಗಿವೆ. ಒಂದು ಕಡೆ ಚಿಕ್ಕ ಮಕ್ಕಳು ಮೆರವಣಿಗೆ ವೇಳೆ ಮೇಲಿಂದ ಉಗಿದಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಪದೇ ಪದೇ ಈಥರ ಘಟನೆಗಳಾಗ್ತಿವೆ ಅಂದ್ರೆ ಜನರೂ ಸಹ ಸ್ಪಂದಿಸಬೇಕು. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ.

ಆದರೂ ಒಂದೆರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ. ಬಿಜೆಪಿಯವರು ಆರೋಪ ಮಾಡ್ತಾರೆ, ಅದೇ ಕೆಲಸ ಅವರದ್ದು ಎಂದರು. ತುಮಕೂರಿನಲ್ಲೂ ಅದ್ಧೂರಿ ದಸರಾ ಆಚರಣೆ ವಿಚಾರವಾಗಿಇದರಲ್ಲಿ ವಿಶೇಷತೆ ಏನೂ ಇಲ್ಲ. ಊರ ಹಬ್ಬ ಮಾಡ್ತಿದೀವಿ, ನಾವು ಮಾರ್ನಮಿ ಅಂತ ಕರೀತೇವೆ. 11 ದಿನಗಳ ಕಾಲವೂ ತುಮಕೂರಿನಲ್ಲಿ ದಸರಾ ಮಾಡ್ತೇವೆ. ಮೈಸೂರಿನಲ್ಲಿ ಹೇಗೆ ಆಚರಣೆ ಮಾಡ್ತೇವೋ ಹಾಗೇ ಮಾಡ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಹತ್ವ ಇಲ್ಲ. ಎಲ್ಲರನ್ನೂ ಸೇರಿಸಿಕೊಂಡು ದಸರಾ ಆಚರಣೆ ಮಾಡ್ತೇವೆ ಎಂದು ಪರಮೇಶ್ವರ್ ಹೇಳಿದರು.