ಇರುಳು ಕುರುಡು ಎಂದು ನಾಟಕವಾಡಿ ಹಗಲಲ್ಲೇ ಮನೆ ದೋಚುತ್ತಿದ್ದ ಅಂತರರಾಜ್ಯ ಖದೀಮನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ನಟನ ಮನೆ ಕಳ್ಳತನದ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿಬಿದ್ದ ಈತನ ಕಥೆ ತಿಳಿಯಿರಿ. ಆರೋಪಿಯಿಂದ 65.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಶ.
ಬೆಂಗಳೂರು (ಡಿ.23): ತನಗೆ ಇರುಳು ಕುರುಡು (Night Blindness) ಸಮಸ್ಯೆ ಇದೆ ಎಂದು ಹೇಳಿಕೊಂಡು, ಹಗಲು ಹೊತ್ತಿನಲ್ಲೇ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ. ಕನ್ನಡ ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಮೊಹಮ್ಮದ್ ಖಾನ್ ಬಂಧಿತನಾಗಿದ್ದು, ಈತನಿಂದ ಸುಮಾರು 65.28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಹಗಲಲ್ಲೇ ಕೈಚಳಕ:
ಆರೋಪಿ ಮೊಹಮ್ಮದ್ ಖಾನ್ ರಾತ್ರಿ ಹೊತ್ತು ತನಗೆ ಸರಿಯಾಗಿ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಹಗಲು ಹೊತ್ತನ್ನೇ ಕಳ್ಳತನಕ್ಕೆ ಆರಿಸಿಕೊಳ್ಳುತ್ತಿದ್ದ. ಬೈಕ್ನಲ್ಲಿ ಏರಿಯಾಗಳನ್ನು ರೌಂಡ್ಸ್ ಹಾಕಿ, ಯಾವ ಮನೆಗಳಿಗೆ ಬೀಗ ಹಾಕಲಾಗಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದ. ಮನೆಯವರು ಕೆಲಸಕ್ಕೆ ಹೋದ ಸಮಯವನ್ನು ಹೊಂಚು ಹಾಕಿ ಕ್ಷಣಾರ್ಧದಲ್ಲಿ ಬೀಗ ಮುರಿದು ಒಳನುಗ್ಗುತ್ತಿದ್ದ.
ಕಿರುತೆರೆ ನಟನ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ
ಜೆ.ಪಿ. ನಗರದಲ್ಲಿ ವಾಸವಾಗಿರುವ ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಈತನ ಬಂಧನಕ್ಕೆ ನಾಂದಿ ಹಾಡಿತು. ಪ್ರವೀಣ್ ಅವರು ಶೂಟಿಂಗ್ಗೆ ತೆರಳಿದ್ದಾಗ ಮತ್ತು ಅವರ ಪತ್ನಿ (ಮೇಕಪ್ ಆರ್ಟಿಸ್ಟ್) ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮೊಹಮ್ಮದ್ ಖಾನ್ ಮನೆಯ ಬೀಗ ಮುರಿದು ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ. ಈ ಬಗ್ಗೆ ಪ್ರವೀಣ್ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ಮೊಹಮ್ಮದ್ ಖಾನ್ ಅತ್ಯಂತ ಚಾಣಾಕ್ಷನಾಗಿದ್ದ. ತನಗೆ ರಾತ್ರಿ ಹೊತ್ತು ಕಣ್ಣು ಕಾಣಿಸುವುದಿಲ್ಲ ಎಂಬ ಕಾರಣ ನೀಡಿ, ಹಗಲು ಹೊತ್ತಿನಲ್ಲೇ ಬೈಕ್ ಮೇಲೆ ಏರಿಯಾಗಳಲ್ಲಿ ರೌಂಡ್ಸ್ ಹಾಕುತ್ತಿದ್ದ. ಯಾವ ಮನೆಗೆ ಬೀಗ ಹಾಕಲಾಗಿದೆ ಎಂಬುದನ್ನು ಗಮನಿಸಿ, ಕ್ಷಣಾರ್ಧದಲ್ಲಿ ಬೀಗ ಮುರಿದು ಒಳನುಗ್ಗುತ್ತಿದ್ದ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈತ ಕೈಚಳಕ ತೋರಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಭಾರಿ ಪ್ರಮಾಣದ ಆಭರಣ ವಶ
ಬಂಧಿತನಿಂದ ಒಟ್ಟು 7 ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಸುಮಾರು 65.28 ಲಕ್ಷ ರೂಪಾಯಿ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ 470 ಗ್ರಾಂ ಚಿನ್ನಾಭರಣ, 1 ಕೆಜಿ 550 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 4.60 ಲಕ್ಷ ರೂಪಾಯಿ ನಗದು ಸೇರಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಈತ ಹತ್ತಾರು ಮನೆಗಳಿಗೆ ಕನ್ನ ಹಾಕಿದ್ದ ಎನ್ನುವುದು ಬಯಲಾಗಿದೆ. ಸದ್ಯ ಜೆ.ಪಿ. ನಗರ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಇನ್ನೂ ಹಲವು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.


